Updated By: Priyalachhi
ಬೆಂಗಳೂರು: ಅಧಿಕಾರ ಹಸ್ತಾಂತರ ವಿಚಾರವಾಗಿ ರಾಜ್ಯದಲ್ಲಿ ಮುಸುಕಿನ ಗುದ್ದಾಟ ಅಂತಿಮ ಹಂತ ತಲುಪಿದಂತೆ ಕಾಣುತ್ತಿದೆ. ”ಮಾತಿನ ಶಕ್ತಿ ಹಾಗೂ ನಂಬಿಕೆ” ಹೆಸರಿನಲ್ಲಿ ರಾಜಕೀಯ ನಾಯಕರು ಭಿನ್ನ ಹೇಳಿಕೆ ನೀಡುತ್ತಿದ್ದಾರೆ.
ಪ್ರಮುಖವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪವರ್ ಶೇರಿಂಗ್ ವಿಚಾರಕ್ಕೆ ಇವರಿಬ್ಬರ ಸೂಚ್ಯ ಹೇಳಿಕೆಗಳು ತೆರೆಮೆರೆ ಕದನಕ್ಕೆ ಇನ್ನಷ್ಟು ಕುತೂಹಲ ಮೂಡುವಂತೆ ಮಾಡಿದೆ.
ಈಗಾಗಲೇ ಒಕ್ಕಲಿಗ ಸಂಘ ಹಾಗೂ ಈ ಸಮುದಾಯದ ಸ್ವಾಮೀಜಿಗಳಾದ ನಿರ್ಮಲಾನಂದನಾಥ ಸ್ವಾಮಿ ಹಾಗೂ ನಂಜಾವಧೂತ ಸ್ವಾಮಿಗಳು ಡಿ.ಕೆ.ಶಿವಕುಮಾರ್ ಅವರನ್ನ ಮುಖ್ಯಮಂತ್ರಿ ಮಾಡಬೇಕೆಂದು ಅಭಿಮತ ವ್ಯಕ್ತಪಡಿಸಿದ್ಧಾರೆ. ಅಲ್ಲದೆ, ಕೆಲ ಸಚಿವರು ಹಾಗೂ ಶಾಸಕರ ದೆಹಲಿ ಪರೇಡ್ ಮಾಡಿದ್ದಾರೆ.
ಇದಕ್ಕೆ ಪ್ರತಿರೋಧವೆಂಬಂತೆ ಸಿದ್ದರಾಮಯ್ಯ ಬಣದ ಸಚಿವ-ಶಾಸಕರು ಸಹ ಐದು ವರ್ಷ ಕಾಲ ಸಿದ್ದರಾಮಯ್ಯನವರೇ ಸಿಎಂ ಆಗಿರಬೇಕೆಂದು ಸಚಿವರಾದ ಸಂತೋಷ್ ಲಾಡ್, ಜಮೀರ್ ಅಹ್ಮದ್, ಹೆಚ್.ಸಿ.ಮಹದೇವಪ್ಪ, ರಾಮಲಿಂಗಾರೆಡ್ಡಿ ಸೇರಿದಂತೆ ಇನ್ನಿತರ ಸಚಿವರು ಹಾಗೂ ಶಾಸಕರು ಒಲವು ವ್ಯಕ್ತಪಡಿಸಿದ್ದಾರೆ. ರಾಜ್ಯ ಕುರುಬ ಸಮುದಾಯವು ಸಿದ್ದರಾಮಯ್ಯ ಅವರನ್ನ ಬೆಂಬಲಿಸಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಈ ಮೂಲಕ ಒತ್ತಡ ತಂತ್ರ ಅನುಸರಿಸಲು ಸಿದ್ದತೆ ನಡೆಸಿದೆ.
ಅಧಿಕಾರ ಹಸ್ತಾಂತರ ಚರ್ಚೆ ಮುನ್ನೆಲೆಗೆ ಬರುತ್ತಿದ್ದಂತೆ ರಾಜ್ಯದಲ್ಲಿ ಬ್ರೇಕ್ ಫಾಸ್ಟ್ / ಡಿನ್ನರ್ ಪಾಲಿಟಿಕ್ಸ್ ಜೋರಾಗಿದೆ. ಇದಕ್ಕೆ ಪೂರಕವೆಂಬಂತೆ ಆಹಾರ ಸಚಿವ ಮುನಿಯಪ್ಪ ಅವರ ಮನೆಯಲ್ಲಿ ಇಂದು ತಿಂಡಿ ನೆಪದಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಂಸದ ಚಂದ್ರಪ್ಪ, ಮಾಜಿ ಶಾಸಕ ವೆಂಕಟರಮಣಯ್ಯ ಸೇರಿದಂತೆ ಹಲವರು ಸಭೆ ಸೇರಿದ್ದಾರೆ.



