ವರದಿ: ಪ್ರಿಯಾಂಕಾ ಚಂದ್ರಶೇಖರ್ ಗಂಧನಹಳ್ಳಿ
ಬೆಂಗಳೂರು: ಸಂಪುಟ ಪುನಾರಚನೆ ಮತ್ತು ಮಂತ್ರಿ ಸ್ಥಾನಕ್ಕೆ ದೆಹಲಿಗೆ ತೆರಳಿರುವ ಕಾಂಗ್ರೆಸ್ ಶಾಸಕರಿಗೆ ಡಿಸಿಎಂ ಡಿಕೆ ಶಿವಕುಮಾರ್ ಶಾಕ್ ನೀಡಿದ್ದು, ಅನಾವಶ್ಯಕ ಗೊಂದಲ ಸೃಷ್ಟಿಸದಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ 3 ವರ್ಷ ತುಂಬಿದ ಹಿನ್ನಲೆಯಲ್ಲಿ ಸಂಪುಟ ಪುನಾರಚನೆ ಮಾಡಬೇಕು ಮತ್ತು ಬೇರೆ ಶಾಸಕರಿಗೂ ಮಂತ್ರಿಯಾಗುವ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ನ ಕೆಲ ಶಾಸಕರ ಗುಂಪು ದೆಹಲಿಗೆ ಹಾರಿದೆ.
ಮಾಜಿ ಸಚಿವ ಟಿಬಿ ಜಯಚಂದ್ರ, ಅಶೋಕ್ ಪಠಾಣ್, ಎಸ್.ನಾರಾಯಣಸ್ವಾಮಿ, ಮತ್ತು ಕೆ.ಷಡಕ್ಷರಿ ಸೇರಿದಂತೆ ಹಲವು ಶಾಸಕರು ದೆಹಲಿಗೆ ಹೋಗಿದ್ದು ಅಲ್ಲಿ ಕಾಂಗ್ರೆಸ್ ಹೈಕಮಾಂಡ್ ಭೇಟಿ ಮಾಡಿ ತಮ್ಮ ಮನವಿ ಸಲ್ಲಿಸಲು ಮುಂದಾಗಿದ್ದಾರೆ.
ಈ ಕುರಿತು ದೆಹಲಿಯಲ್ಲಿ ಮಾತನಾಡಿದ್ದ ಟಿಬಿ ಜಯಚಂದ್ರ ಅವರು, ‘ಇದು ನನಗೆ ನಿತ್ಯದ ಕೆಲಸ. ನಾನು ದೆಹಲಿಯಲ್ಲಿ ರಾಜ್ಯ ಪ್ರತಿನಿಧಿ. ವಿಧಾನಸಭಾ ಚುನಾವಣೆಯ ನಂತರ ನಾನು ಇಲ್ಲಿದ್ದೇನೆ. ಈಗ, ಇಂದು ನಾನು ಮಾತ್ರ ಬಂದಿದ್ದೇನೆ. ಅನೇಕ ಶಾಸಕರು ಸಹ ಬರುತ್ತಿದ್ದಾರೆ.
ನಾವು ಹೈಕಮಾಂಡ್ ಅನ್ನು ಭೇಟಿ ಮಾಡಿ ಪುನರ್ರಚನೆಗಾಗಿ ಮನವೊಲಿಸಲು ಬಯಸಿದ್ದೆವು, ಅದು ಅನೇಕ ಹಿರಿಯ ಶಾಸಕರ ಬೇಡಿಕೆಯಾಗಿದೆ, ಈ ಸರ್ಕಾರಕ್ಕೆ ಮೂರು ವರ್ಷಗಳ ಕಾಲ ಅವಕಾಶ ನೀಡಲಾಗಿದೆ. ಮೂರು ವರ್ಷಗಳು ಮುಗಿದಿವೆ, ಕೇವಲ ಎರಡು ವರ್ಷಗಳು ಮಾತ್ರ ಉಳಿದಿವೆ. ಅದಕ್ಕಾಗಿಯೇ ನಾವೆಲ್ಲರೂ ಹೆಚ್ಚಿನ ಬೇಡಿಕೆಯನ್ನು ಪೂರೈಸಲು ಬಯಸಿದ್ದೇವೆ ಎಂದು ಹೇಳಿದ್ದಾರೆ.



