Updated By: Priyalachhi
ನವದೆಹಲಿ: ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯ ವೇಳೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮಾಜಿ ಸೇನಾ ಮುಖ್ಯಸ್ಥ ಎಂ.ಎಂ.ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆಯಲ್ಲಿನ ವಾಕ್ಯವನ್ನು ಉಲ್ಲೇಖಿಸಲು ಪ್ರಯತ್ನಿಸಿದ್ದು ಲೋಕಸಭೆಯಲ್ಲಿಂದು ಭಾರೀ ಗದ್ದಲ ಸೃಷ್ಟಿಸಿತು.
ರಾಹುಲ್ ಗಾಂಧಿ ಅವರು ಲಡಾಖ್ ಬಿಕ್ಕಟ್ಟಿನ ಬಗ್ಗೆ ಪ್ರಸ್ತಾಪಿಸಲು ಆರಂಭಿಸಿದಾಗ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಗೃಹ ಸಚಿವ ಅಮಿತ್ ಶಾ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪುಸ್ತಕ ಪ್ರಕಟವಾಗಿಲ್ಲ. ಅದರ ಮಾಹಿತಿ ಸುಳ್ಳಾಗಿದೆ. ಸದನದಲ್ಲಿ ಈ ಬಗ್ಗೆ ಚರ್ಚಿಸುವಂತಿಲ್ಲ ಎಂದರು.
ಆದರೂ, ರಾಹುಲ್ ಗಾಂಧಿ ಮಾಜಿ ಸೇನಾ ಮುಖ್ಯಸ್ಥರ ಹೇಳಿಕೆಯನ್ನು ಪ್ರಸ್ತಾಪಿಸಲು ಪದೇ ಪದೇ ಪ್ರಯತ್ನಿಸಿದರು. ಪುಸ್ತಕ ಪ್ರಕಟವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೇಳಿದರು.
ದಿ ಕ್ಯಾರವಾನ್ ನಿಯತಕಾಲಿಕೆಯು ಫೆಬ್ರವರಿಯಲ್ಲಿ ತನ್ನ ಮುಖಪುಟದಲ್ಲಿ ಮಾಜಿ ಸೇನಾ ಮುಖ್ಯಸ್ಥರ ಅಪ್ರಕಟಿತ ಆತ್ಮಚರಿತ್ರೆಯ ಕುರಿತು ಪ್ರಕಟಿಸಿದೆ. ಇದು ಲಡಾಖ್ ಕುರಿತು ಕೇಂದ್ರ ಸರ್ಕಾರ ಮತ್ತು ಚೀನಾದ ನಡುವಿನ ಗಡಿ ಬಿಕ್ಕಟ್ಟಿನ ಬಗ್ಗೆ ವಿವರಿಸಲಾಗಿದೆ ಎಂದು ಹೇಳಲಾಗಿದೆ.
ಇತ್ತ, ರಾಜನಾಥ್ ಸಿಂಗ್ ಅಪ್ರಕಟಿತ ಪುಸ್ತಕ ಮತ್ತು ನಿಯತಕಾಲಿಕೆಗಳಲ್ಲಿ ಬರೆದ ಮಾತ್ರಕ್ಕೆ ಅದನ್ನು ಸದನದಲ್ಲಿ ಮಂಡಿಸುವಂತಿಲ್ಲ. ಇದು ನಿಯಮಕ್ಕೆ ವಿರುದ್ಧ ಎಂದು ವಾದಿಸಿದರು. ಇದನ್ನು ಗೃಹ ಸಚಿವ ಅಮಿತ್ ಶಾ ಬೆಂಬಲಿಸಿದರು.



