Updated By: Priyalachhi
ಬೆಂಗಳೂರು: ನರೇಗಾದಂತಹ ಜನಪರ ಯೋಜನೆಯನ್ನು ಮರುಸ್ಥಾಪಿಸಲು ಜನಾಗ್ರಹದ ಒತ್ತಡ ಅತ್ಯಗತ್ಯವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆಯವರು ಶುಕ್ರವಾರ ಹೇಳಿದ್ದಾರೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MNREGA)ಯ ಹೆಸರನ್ನು ‘ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕಾ ಮಿಷನ್ (ಗ್ರಾಮೀಣ)’ (VB-G RAM G) ಎಂದು ಮರುನಾಮಕರಣ ಮಾಡುವ ಕೇಂದ್ರ ಸರ್ಕಾರದ ಯೋಜನೆಗೆ ಪ್ರಿಯಾಂಕ್ ಖರ್ಗೆಯವರು ವಿರೋಧ ವ್ಯಕ್ತಪಡಿಸಿದ್ದಾರೆ.
ಭೂ ರಹಿತ ಕಾರ್ಮಿಕರಿಗೆ ಉದ್ಯೋಗ ಮತ್ತು ಸಂಪಾದನೆಯ ಭರವಸೆಯನ್ನು ನೀಡುವುದರೊಂದಿಗೆ ಸಣ್ಣ, ಅತಿ ಸಣ್ಣ ರೈತರು ಹೊಸ ಕೃಷಿ ಚಟುವಟಿಕೆಗಳಿಗೂ ನೆರವಾಗಿದೆ, ಅಲ್ಲದೆ ಉಪ ಕಸುಬುಗಳನ್ನು ಕೈಗೊಳ್ಳಲು ನೆರವಾಗುವ ಮೂಲಕ ಹೆಚ್ಚುವರಿ ಆದಾಯಕ್ಕೆ ದಾರಿ ಮಾಡಿಕೊಟ್ಟಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಮೇಲಿನಜೂಗಾನಹಳ್ಳಿ ಗ್ರಾಮ ಪಂಚಾಯಿತಿಯ ತುರುವನಹಳ್ಳಿ ಗ್ರಾಮದ ಅಂಬರೀಶ್ ಅವರು ನರೇಗಾ ಯೋಜನೆಯಡಿ ₹70,000 ಆರ್ಥಿಕ ನೆರವು ಪಡೆದು ಸುಸಜ್ಜಿತ ಕುರಿ ಶೆಡ್ ನಿರ್ಮಿಸಿಕೊಂಡು ಉತ್ತಮ ಆದಾಯ ಪಡೆಯುತ್ತಿದ್ದಾರೆ.
ಹೀಗೆ ಬಹು ಆಯಾಮದಲ್ಲಿ ಗ್ರಾಮೀಣ ಜನರ ಬದುಕನ್ನು ಸದೃಢಗೊಳಿಸುತ್ತಿರುವ ನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ಬಂದ್ ಮಾಡಿದೆ, ಬದಲಾದ ಯೋಜನೆಯು ಗ್ರಾಮೀಣ ಜನರ ಭರವಸೆಯನ್ನು ಅತಂತ್ರಗೊಳಿಸಿದೆ. ಹೀಗಾಗಿ ನರೇಗಾದಂತಹ ಜನಪರ ಯೋಜನೆಯನ್ನು ಮರುಸ್ಥಾಪಿಸಲು ಜನಾಗ್ರಹದ ಒತ್ತಡ ಅತ್ಯಗತ್ಯವಾಗಿದೆ ಎಂದು ಹೇಳಿದ್ದಾರೆ.



