Updated By: Priyalachhi
ಮೈಸೂರು: “ಮೈಸೂರು ಅರಮನೆ ಮುಂಭಾಗ ಸಂಭವಿಸಿದ ಸ್ಫೋಟ ಅನಿರೀಕ್ಷಿತ. ಸಿಲಿಂಡರಿನ ತಾಪಮಾನ ಹೆಚ್ಚಾಗಿ ಸ್ಫೋಟಗೊಂಡಿದೆ” ಎಂದು ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದರು.
“ನಿನ್ನೆ ರಾತ್ರಿ ಸುಮಾರು 8.30ರ ಸುಮಾರಿಗೆ ಘಟನೆ ನಡೆದಿದೆ. ಸಿಲಿಂಡರ್ ಸ್ಫೋಟಗೊಂಡು ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಪ್ರವಾಸಕ್ಕೆ ಬಂದಿದ್ದ ಐವರಿಗೆ ಗಾಯವಾಗಿದೆ. ಇಬ್ಬರ ಸ್ಥಿತಿ (ಲಕ್ಷ್ಮಿ ಹಾಗೂ ಮಂಜುಳ) ಗಂಭೀರವಾಗಿದೆ. ಮೃತಪಟ್ಟ ವ್ಯಕ್ತಿ ಉತ್ತರ ಪ್ರದೇಶದವರಾಗಿದ್ದು ಸೀಸನಲ್ ವ್ಯಾಪಾರಿ. ಈ ಬಾರಿ ಬಲೂನ್ ಮಾರಾಟ ಮಾಡುತ್ತಿದ್ದರು. ಹೊರಗಡೆಯಿಂದ ಗ್ಯಾಸ್ ಸಿಲಿಂಡರ್ ತಂದು ಅವರು ಬಲೂನ್ ವ್ಯಾಪಾರ ಮಾಡುತ್ತಿದ್ದರು. ಆ ಸಿಲಿಂಡರ್ ತಾಪಮಾನ ಹೆಚ್ಚಾಗಿ ಸ್ಫೋಟಗೊಂಡಿದೆ” ಎಂದು ತಿಳಿಸಿದರು.
ಘಟನೆಯ ಮಾಹಿತಿ ಕೇಳಿದ NIA: “ಯಾವುದೇ ರಾಸಾಯನಿಕ ವಸ್ತುಗಳನ್ನು ಬಳಸಲು ನಾವು ಅವಕಾಶ ಕೊಡುವುದಿಲ್ಲ. ಆದರೆ ಈ ಪ್ರಕರಣದಲ್ಲಿ ಅವರೇ ಗ್ಯಾಸ್ ಸಿಲಿಂಡರ್ ತಂದಿದ್ದಾರೆ. ಪೌಡರ್ ಮಿಕ್ಸ್ ಮಾಡಿ ಅವರೇ ರಾಸಾಯನಿಕ ಮಾಡಿಕೊಳ್ಳುತ್ತಾರೆ. ಅನಿರೀಕ್ಷಿತವಾಗಿ ಸ್ಫೋಟ ನಡೆದಿದೆ. ಇದೊಂದು ಪಾಠ. ಗಾಯಾಳುಗಳ ಚಿಕಿತ್ಸಾ ವೆಚ್ಚಗಳನ್ನು ಸರ್ಕಾರವೇ ನಿರ್ವಹಿಸಲಿದೆ. ಮುಖ್ಯಮಂತ್ರಿಗಳು ಪರಿಹಾರ ಘೋಷಿಸುವ ಬಗ್ಗೆ ಮಾತನಾಡಿದ್ದಾರೆ. NIA ಮಾಹಿತಿ ಕೇಳಿರುವುದು ರುಟೀನ್ ಅಷ್ಟೇ. ಅವರು ತನಿಖೆ ಮಾಡಬಹುದು” ಎಂದರು.
“ಮೃತಪಟ್ಟ ಬಲೂನ್ ವ್ಯಾಪಾರಿಯೊಂದಿಗೆ ಉತ್ತರ ಪ್ರದೇಶದಿಂದ ಇನ್ನಿಬ್ಬರು ಬಂದಿದ್ದರು. ಅವರು ಬೇರೆಡೆ ವ್ಯಾಪಾರ ಮಾಡುತ್ತಿದ್ದರು. ಘಟನೆಯಿಂದ ಎಚ್ಚೆತ್ತುಕೊಂಡಿದ್ದು, ಪ್ರವಾಸಿಗರ ನಗರಿಯಲ್ಲಿ ಈ ರೀತಿಯ ನಡೆಯಬಾರದು. ಪೊಲೀಸರಿಗೂ ಹೆಚ್ಚು ನಿಗಾವಹಿಸುವಂತೆ ಸೂಚಿಸಲಾಗಿದೆ. ನಾನು ದಾವಣಗೆರೆಗೆ ತೆರಳಬೇಕಿತ್ತು. ಆ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮೈಸೂರಿನಲ್ಲಿ ಈ ರೀತಿ ಘಟನೆ ನಡೆದಿದೆ, ತಕ್ಷಣ ತೆರೆಳುವಂತೆ ಸೂಚಿಸಿದರು. ಅವರ ಸೂಚನೆಯಂತೆ ಮೈಸೂರಿಗೆ ಆಗಮಿಸಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದೇನೆ” ಎಂದು ಹೇಳಿದರು.



