Updated By: Priyalachhi
ಬೆಂಗಳೂರು: ಜಂಟಿ ಅಧಿವೇಶನದ ವೇಳೆ ರಾಜ್ಯ ಸರ್ಕಾರದ ಭಾಷಣವನ್ನು ಸಂಪೂರ್ಣವಾಗಿ ಓದದೆ ಕೇವಲ ಎರಡು ಸಾಲಿನ ಭಾಷಣ ಓದಿ ಸಂಘರ್ಷ ಏರ್ಪಟ್ಟಿದ್ದ ಬೆನ್ನಲ್ಲೇ ಇದೀಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಗಣರಾಜ್ಯೋತ್ಸವ ಭಾಷಣ ಮಹತ್ವ ಪಡೆದುಕೊಂಡಿದೆ. ರಾಜ್ಯ ಸರ್ಕಾರ ಸಿದ್ಧಪಡಿಸಿದ ಈ ಗಣರಾಜ್ಯೋತ್ಸವ ದಿನದ ಭಾಷಣದಲ್ಲಿ ಜಂಟಿ ಅಧಿವೇಶನದ ಭಾಷಣದಂತೆ ಕೇಂದ್ರ ಸರ್ಕಾರವನ್ನು ಟೀಕಿಸುವ ಅಂಶವನ್ನು ಸೇರಿಸಿಲ್ಲ ಎಂದು ಹೇಳಲಾಗುತ್ತಿದೆ.
ಈಗಾಗಲೇ ಜಂಟಿ ಅಧಿವೇಶನದ ಭಾಷಣ ವಿಚಾರದಲ್ಲಿ ರಾಜ್ಯದಲ್ಲಿ ರಾಜ್ಯಪಾಲ ಮತ್ತು ಸರ್ಕಾರದ ಮಧ್ಯೆ ಸಂಘರ್ಷ ಉಂಟಾಗಿದೆ. ಅದೇ ರೀತಿ ಇಂದಿನ ಗಣರಾಜ್ಯೋತ್ಸವ ದಿನದ ರಾಜ್ಯಪಾಲರ ಭಾಷಣದ ವಿಚಾರವಾಗಿ ಮತ್ತೆ ಜಟಾಪಟಿ ಏರ್ಪಡುತ್ತಾ ಎಂಬ ಪ್ರಶ್ನೆಗಳು ಮೂಡಿವೆ. ಇಂದು ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ನಡೆಯಲಿರುವ ಗಣರಾಜ್ಯೋತ್ಸವದಂದು ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಈ ವೇಳೆ ಸಂಪ್ರದಾಯದಂತೆ, ಸರ್ಕಾರದ ಇದುವರೆಗಿನ ಯೋಜನೆಗಳು, ಕಾರ್ಯಕ್ರಮಗಳು, ಸಾಧನೆಗಳು, ಮುಂದಿನ ಯೋಜನೆಗಳು ಮತ್ತು ಗುರಿಗಳನ್ನು ವಿವರಿಸಲಿದ್ದಾರೆ. ಆದರೆ, ಸರ್ಕಾರ ಸಿದ್ಧಪಡಿಸಿದ ಭಾಷಣದಲ್ಲಿ ರಾಜ್ಯ ಸರ್ಕಾರ ಮತ್ತೆ ಕೇಂದ್ರ ಸರ್ಕಾರದ ವಿರುದ್ಧ ಟೀಕಿಸುವ ಅಂಶಗಳನ್ನು ಸೇರಿಸಿದರೆ, ಆ ಭಾಷಣವನ್ನು ಓದದೇ ತಾವೇ ಸಿದ್ಧಪಡಿಸಿದ ಭಾಷಣ ಓದುವುದಾಗಿ ರಾಜ್ಯಪಾಲರು ಸಂದೇಶವನ್ನು ನೀಡಿದ್ದಾರೆ ಎಂದು ಹೇಳಲಾಗಿದೆ.
ಈಗಾಗಲೇ ಪ್ರಸಕ್ತ ನಡೆಯುತ್ತಿರುವ ಜಂಟಿ ಅಧಿವೇಶನ ವೇಳೆ ಸರ್ಕಾರದ ಭಾಷಣವನ್ನು ಓದದೇ ಕೇವಲ ಎರಡು ಸಾಲಿನಲ್ಲಿ ಓದಿ ಹೊರ ನಡೆದ ರಾಜ್ಯಪಾಲರ ನಡೆ ವಿರುದ್ಧ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ವಾಪಸ್ ಕರೆಸಿಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. ಈ ಮಧ್ಯೆ ಗಣರಾಜ್ಯೋತ್ಸವ ದಿನದಂದು ಮತ್ತೊಂದು ಸಂಘರ್ಷ ಏರ್ಪಡುತ್ತಾ ಎಂಬುದು ಎಲ್ಲರ ಕುತೂಹಲವಾಗಿದೆ.
ರಾಜ್ಯಪಾಲರ ಭಾಷಣದಲ್ಲಿ ಮತ್ತೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದ್ದ ನರೇಗಾ ಯೋಜನೆ ಕುರಿತು ಉಲ್ಲೇಖ ಮಾಡಿಲ್ಲ ಎಂದು ಮೂಲಗಳು ತಿಳಿಸಿವೆ. ಸಾಮಾನ್ಯವಾಗಿ ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ರಾಜ್ಯಪಾಲರಿಗೆ ಕನಿಷ್ಠ 4ರಿಂದ 5 ಐದು ದಿನಗಳ ಮುಂಚಿತವಾಗಿ ಕಳುಹಿಸಿಕೊಡಲಾಗುತ್ತದೆ. ಇದರಲ್ಲಿ ಏನಾದರೂ ತಿದ್ದಪಡಿ ಮಾಡಬೇಕಾಗುವ ಅಂಶಗಳಿದ್ದರೆ ಸರಿಪಡಿಸುವಂತೆ ರಾಜಭವನ ಅಧಿಕಾರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡುತ್ತಾರೆ. ಮುಖ್ಯ ಕಾರ್ಯದರ್ಶಿಗಳು ಇದನ್ನು ಮುಖ್ಯಮಂತ್ರಿ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳುವುದು ಈವರೆಗೆ ನಡೆದುಕೊಂಡು ಬರುತ್ತಿರುವ ಸಂಪ್ರದಾಯ.



